ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ, ರಂಗ ಕಲಾವಿದೆ ವಿಮಲಾ ರಂಗಾಚಾರ್ ಅವರಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.
ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಮೃತರ ಗುಣಗಾನ ಮಾಡಿದರು.
ಈ ವೇಳೆ ಸಭಾಧ್ಯಕ್ಷರು, ಸುಬ್ಬಯ್ಯ ಶೆಟ್ಟಿ, ಭೂಸುಧಾರಣೆ, ವಾರ್ತಾ, ಇಂಧನ, ಶಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಭೂಸುಧಾರಣೆ ಮೂಲಕ ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಾಗ ಭೂಸುಧಾರಣಾ ಸಚಿವರಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದರು ಎಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸುಬ್ಬಯ್ಯ ಶೆಟ್ಟಿ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ, ಸರಳ ವ್ಯಕ್ತಿಯಾಗಿದ್ದ ಸುಬ್ಬಯ್ಯ ಶೆಟ್ಟಿ ಅವರು, ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದರು ಎಂದರು.
ವಿಧಾನ ಪರಿಷತ್ ನಲ್ಲೂ ಕೂಡ ಸುಬ್ಬಯ್ಯ ಶೆಟ್ಟಿ ಅವರಿಗೆ ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚಕದಲ್ಲಿ, ಸುಬ್ಬಯ್ಯ ಶೆಟ್ಟಿ ಅವರು 1972 ಮತ್ತು 1978ರಲ್ಲಿ ಎರಡು ಬಾರಿ ಸೂರತ್ಕಲ್ ಶಾಸಕರಾಗಿ ದೇವರಾಜ್ ಅರಸು ಅವರ ಸಚಿವ ಸಂಪುಟದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.
ಸರ್ಕಾರದ ಪರವಾಗಿ ಶಿವಾನಂದ್ ಪಾಟೀಲ್ ಅವರು ಸುಬ್ಬಯ್ಯ ಶೆಟ್ಟಿ ಅವರ ಗುಣಗಾನ ಮಾಡಿದರು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕನ್ನಡದ ಹಿರಿಯ ರಂಗ ಕಲಾವಿದೆ, ಸಂಘಟಕಿ, ಲಲಿತ ಕಲೆಗಳ ಪೋಷಕರಾಗಿದ್ದ ವಿಮಲಾ ರಂಗಾಚಾರ್ ನಿಧನ ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಬಳಿಕ ಮೃತರ ಗೌರವಾರ್ಥ ಮೌನ ಆಚರಿಸಲಾಯಿತು.
#LiveDDChandanaNews #DDChandanaNews #DDChandana #DDKannada